ಪಾಟ್ನಾ : ಬಿಹಾರದ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆಯಷ್ಟು ದಿನ ಬಾಕಿ ಉಳಿದಿದ್ದು, ಎರಡು ಮೈತ್ರಿಕೂಟಗಳ ಘಟಾನುಘಟಿ ನಾಯಕರುಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು (ಗುರುವಾರ ಅ 30) ಮುಜಫರ್ಪುರ ಜಿಲ್ಲೆಯಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಾಘಟಬಂಧನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಪಕ್ಷಗಳಿಂದ ಛತ್ ಪೂಜೆಗೆ ಅವಮಾನ; ನಾವು ಯುನೆಸ್ಕೋ ಪಟ್ಟಿಗೆ ಸೇರಿಸಲಿದ್ದೇವೆ
ವಿಪಕ್ಷಗಳಾದ ಆರ್ಜೆಡಿ, ಕಾಂಗ್ರೆಸ್ ಬಿಹಾರದ ಪ್ರಮುಖ ಆಚರಣೆಯಾದ ಛತ್ ಪೂಜೆಯನ್ನು ಅಪಮಾನ ಮಾಡಿವೆ, ಚುನಾವಣೆಯಲ್ಲಿ ಮತ ಪಡೆಯಲು ಯಾರಾದರೂ ಛಥಿ ಮೈಯ್ಯರಿಗೆ ಅವಮಾನಿಸಬಹುದೇ? ಇದನ್ನು ಬಿಹಾರ ಮತ್ತು ದೇಶದ ಜನರು ಸಹಿಸಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
ನಿಮ್ಮ ಮಗ (ಪ್ರಧಾನಿ ಮೋದಿ) ಜಗತ್ತಿನ ಮುಂದೆ ಛಥಿ ಮಾತೆಯನ್ನು ಹೊಗಳುವುದರಲ್ಲಿ ನಿರತನಾಗಿದ್ದಾನೆ. ಇತ್ತ ಕಾಂಗ್ರೆಸ್ ಮತ್ತು ಆರ್ಜೆಡಿ ನಾಯಕರು ಆ ತಾಯಿಯನ್ನು ಅವಮಾನಿಸುತ್ತಿದ್ದಾರೆ. ನೀರು ಸಹ ಸೇವಿಸದೆ ಉಪವಾಸ ಆಚರಿಸುವ ಬಿಹಾರದ ನನ್ನ ತಾಯಂದಿರು ಇದನ್ನು ಸಹಿಸಿಕೊಳ್ಳುತ್ತಾರೆಯೇ? ಎಂದು ಭಾವನಾತ್ಮಕ ಅಸ್ತ್ರ ಬಿಟ್ಟರು.
ಮಹಾಘಟಬಂಧನ್ದ ಪ್ರಮುಖ ಪಕ್ಷಗಳಾದ ಆರ್ಜೆಡಿ, ಕಾಂಗ್ರೆಸ್ ನಾಚಿಕೆ ಇಲ್ಲದೇ ಮಾತನಾಡುತ್ತಿವೆ, ಅವರ ದೃಷ್ಠಿಯಲ್ಲಿ ಛತ್ ಆಚರಣೆ ಕೇವಲ ನಾಟಕ, ಪ್ರಹಸನವೇ.?. ಈ ರೀತಿಯ ಅವಮಾನವು ಶತಮಾನಗಳವರೆಗೆ ಸಾರ್ವಜನಿಕರ ನೆನಪಿನಲ್ಲಿ ಉಳಿಯುತ್ತದೆ, ಬಿಹಾರ ಸ್ವಾಭಿಮಾನದ ನಾಡು. ಇಲ್ಲಿನ ಜನ ಛತ್ ಪೂಜೆ ಅವಮಾನಿಸಿದವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಛತ್ ಪೂಜೆಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಇದು ಪ್ರತಿಯೊಬ್ಬ ಬಿಹಾರಿ ಮತ್ತು ಭಾರತೀಯನೂ ಹೆಮ್ಮೆ ಪಡುವ ವಿಷಯವಾಗಿದೆ. ಜಗತ್ತು ಇಂತಹ ಮೌಲ್ಯಗಳಿಂದ ಕಲಿಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಸದಾ ಶ್ರಮಿಸುತ್ತದೆ ಎಂದು ಹೇಳಿದರು.
ಬಿಹಾರದಲ್ಲಿ ಮತ್ತೊಮ್ಮೆ ಆಡಳಿತಾರೂಢ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಪ್ರಧಾನಿ ಮೋದಿ, ಯಹಾ ಕಿ ಲಿಚಿ ಜಿತ್ನಿ ಮೀಥಿ ಹೋತೀ ಹೈ, ಉತ್ನಿ ಹಿ ಮೀಥಿ ಹೈ ಬೋಲಿ ಭಿ ಹೈ (ಇಲ್ಲಿನ ಲಿಚಿಗಳು ಇಲ್ಲಿ ಮಾತನಾಡುವ ಭಾಷೆಯಂತೆ ತುಂಬಾ ಸಿಹಿಯಾಗಿದೆ)… ನಾನು ಇಲ್ಲಿ ಹಲವಾರು ಯುವಕರು ಮತ್ತು ಮಹಿಳೆಯರು ಜಮಾಯಿಸಿರುವುದನ್ನು ನಾನು ನೋಡುತ್ತೇನೆ.

