ಕಾರವಾರ. ಜು. 16: ಅಂಕೋಲಾದ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಒಂದೇ ಕುಟುಂಬದ ಐವರು ಸೇರಿ ಒಂಬತ್ತು ಜನ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.
ಹೆದ್ದಾರಿ ಪಕ್ಕದ ಡಾಬಾದಲ್ಲಿದ್ದ ಲಕ್ಷ್ಮಣ ನಾಯ್ಕ(47 ), ಶಾಂತಿ ನಾಯ್ಕ(36), ರೋಶನ್ ನಾಯ್ಕ(11), ಅವಂತಿಕಾ (6), ಜಗನ್ನಾಥ (55) ಮಣ್ಣಿನಡಿ ಸಿಲುಕಿದ್ದಾರೆ. ಟ್ಯಾಂಕರ್ ಹಾಗೂ ಅದರಲ್ಲಿದ್ದ ಕ್ಲೀನರ್ ಕೂಡ ಸಿಲುಕಿದ್ದು, ಅವರ ಹೆಸರು ತಿಳಿದು ಬರಬೇಕಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಟಿ ಕುಡಿಯುತ್ತಿದ್ದರು. ಇದೇ ವೇಳೆ ಭಾರಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದ್ದು, ಚಾಲಕ ಹಾಗೂ ಕ್ಲೀನರ್ ಮಣ್ಣಿನಡಿ ಸಿಲುಕಿದ್ದಾರೆ.
ಮಣ್ಣಿನಡಿ ಸಿಲುಕಿದವರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜಿಲ್ಲಾಡಳಿತವು ಹೆದ್ದಾರಿ ಮೇಲಿನನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಘನಾಶಿನಿ ನದಿಯ ನೀರು ಹೆಗಡೆ ಗ್ರಾಮಕ್ಕೆ ನುಗ್ಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.

