ಚಾಮರಾಜನಗರ : ತಾಲ್ಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಗಸ್ತಿನ ಹೊಳೆ ವ್ಯಾಪ್ತಿಯ ಮುರದಟ್ಟಿಯ ಕಿರುಬನಕಲ್ಲು ಗುಡ್ಡದಲ್ಲಿ ಎರಡು ಹುಲಿ ಮರಿಗಳು ಮೃತಪಟ್ಟಿವೆ.
ಸೋಮವಾರ ಸಿಬ್ಬಂದಿ ಗಸ್ತು ತಿರುಗುವಾಗ ಗಂಡು ಹುಲಿಮರಿ ಕಳೇಬರ ಸಿಕ್ಕಿದೆ. ಮಂಗಳವಾರ ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಹುಲಿಮರಿ ಮೃತಪಟ್ಟ ಜಾಗದ ಆಸುಪಾಸಿನಲ್ಲಿ ಕೂಂಬಿಂಗ್ ನಡೆಸಿದಾಗ 50 ಮೀಟರ್ ದೂರದ ಗುಹೆಯೊಂದರ ಬಳಿ ಮತ್ತೊಂದು ಹೆಣ್ಣು ಹುಲಿ ಮರಿಯ ಕಳೇಬರ ದೊರೆತಿದೆ.
ಮರಿಗಳು ಜನಿಸಿ 15 ದಿನಗಳಾಗಿದ್ದು, ತಾಯಿ ಹುಲಿಯಿಂದ ಬೇರ್ಪಟ್ಟ ಬಳಿಕ ಹಸಿವಿನಿಂದ ಬಳಲಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 26ರಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಬಳಿ ಐದು ಹುಲಿಗಳು ವಿಷಪ್ರಾಷನದಿಂದ ಮೃತಪಟ್ಟಿದ್ದವು. ಇದೀಗ ಮತ್ತೆರಡು ಹುಲಿ ಮರಿಗಳು ಸಾವನ್ನಪ್ಪಿದ್ದು ಪ್ರಾಣಿಪ್ರಿಯರು ಆಘಾತ ವ್ಯಕ್ತಪಡಿಸಿದ್ದಾರೆ.

