ತುಮಕೂರು: ವಸತಿ ಸೌಲಭ್ಯಕ್ಕಾಗಿ ಆಗ್ರಹಿಸಿ ದಯಾಮರಣ ನೀಡುವಂತೆ ಮನವಿ ಮಾಡಿದ್ದ ಮಹಿಳೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾನವೀಯ ಸ್ಪಂದನೆ ನೀಡಿದ್ದು, ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಾಬಿಯಾ ಎಂಬ ಮಹಿಳೆ ಎದುರಿಸುತ್ತಿದ್ದ ಸಂಕಷ್ಟಕ್ಕೆ ಕೊನೆಗೂ ಪರಿಹಾರದ ಬೆಳಕು ಕಂಡಿದೆ. ಅಸಹಾಯಕ ಸ್ಥಿತಿಯಲ್ಲಿ ಇದ್ದ ಆಕೆಯ ನೋವಿಗೆ ಮರುಗಿದ ಸಚಿವರು, ಆಕೆಗೆ ಆಸರೆಯಾಗುವ ಭರವಸೆ ನೀಡಿದರು.
ಕಳೆದ ಏಪ್ರಿಲ್ 8ರಂದು ತುಮಕೂರು ನಗರದ ಗ್ರಂಥಾಲಯ ಸಂಕೀರ್ಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ರಾಬಿಯಾ ಎಲ್ಲರ ಗಮನ ಸೆಳೆದಿದ್ದರು. ವೇದಿಕೆಗೆ ಏರಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಮನೆ ನೀಡುವುದಾಗಿ ಭರವಸೆ ನೀಡಿದರೂ ಇದುವರೆಗೆ ವಸತಿ ಸೌಲಭ್ಯ ಸಿಕ್ಕಿಲ್ಲ ಎಂದು ಆರೋಪಿಸಿದ್ದರು.
“ಬದುಕಲು ದಾರಿ ಇಲ್ಲದಿದ್ದರೆ ದಯಾಮರಣ ನೀಡಿ” ಎಂದು ಕಣ್ಣೀರಿನಿಂದ ಮನವಿ ಮಾಡಿದ್ದ ರಾಬಿಯಾ, ತಮ್ಮ ಸಮಸ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬರಲಿ ಎಂಬ ಉದ್ದೇಶದಿಂದ ಹಾಡು ಹಾಡುವ ಮೂಲಕವೂ ಸಂಕಷ್ಟ ವ್ಯಕ್ತಪಡಿಸಿದ್ದರು.
ಇದಾದ ನಂತರ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದಿದ್ದ ಸಚಿವ ಪರಮೇಶ್ವರ್ ಅವರನ್ನು ರಾಬಿಯಾ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದರು. ಈ ವೇಳೆ ಆಕೆಯ ಸಮಸ್ಯೆಯನ್ನು ಆಲಿಸಿದ ಸಚಿವರು, ಮುಂದಿನ ಆರು ತಿಂಗಳ ಮನೆ ಬಾಡಿಗೆಯನ್ನು ತಾವೇ ಭರಿಸುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ದಿನಸಿ ಹಾಗೂ ರೇಷನ್ ವೆಚ್ಚವನ್ನೂ ತಾವೇ ನೋಡಿಕೊಳ್ಳುವುದಾಗಿ ಭರವಸೆ ನೀಡಿರುವ ಸಚಿವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

