ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ತನ್ನ ಮನೆಯ ಮುಂದೆ ದಟ್ಟಣೆ ಆಗಬಾರದೆಂಬ ಉದ್ದೇಶದಿಂದ ಜಯನಗರದ ಎಂಇಎಸ್ ಮೈದಾನದಲ್ಲಿ ತನ್ನ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸುದೀಪ್ ಇಂದು 50 ವಸಂತಗಳನ್ನು ತುಂಬಿ 51ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ತನ್ನ ವಿಭಿನ್ನ ನಟನಾ ಶೈಲಿಯಿಂದ ಚಂದನವನದಲ್ಲಿ ಅಷ್ಟೇ ಅಲ್ಲದೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲೂ ಇವರು ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ .
ನೆಚ್ಚಿನ ನಟನ ಹುಟ್ಟು ಹಬ್ಬ ಆಚರಣೆ ಮಾಡಲು ಜಿಲ್ಲೆ ಜಿಲ್ಲೆಯಿಂದ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಅಭಿಮಾನಿಗಳಿಗಾಗಿಯೇ ಬರ್ತ್ ಡೇ ಕೇಕ್ ಕಟಿಂಗ್ ಹಮ್ಮಿಕೊಂಡಿದ್ದರು. ಹೀಗಾಗಿ ಸಾವಿರಾರು ಪ್ರಮಾಣದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಕಿಚ್ಚ ಸುದೀಪ್ ಅವರು ಬಂದ ಕೂಡ ಕೇಕ್ ಮಾಡಿ ಸಂಭ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಇವರು ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ನನ್ನ ತಂದೆಗೆ ತಾಯಿಗೆ 85 ಮತ್ತು 86 ವರ್ಷ. ನಮ್ಮ ಸುತ್ತಮುತ್ತ ಇರುವ ಮನೆಯವರಿಗೂ ತೊಂದರೆಯಾಗಬಾರದು. ಬ್ಯಾರಿಕೇಡ್ ಎಲ್ಲಾ ಮುರಿದು ನನ್ನ ಪ್ರೀತಿಯ ಪೊಲೀಸ್ ಸಿಬ್ಬಂದಿಗಳಿಗೆ ಆದ ತೊಂದರೆಯಿಂದಾಗಿ… ಎಲ್ಲರೂ ಕೇಳಿಕೊಂಡದ್ದು.. ಮನೆಯ ಹತ್ರ ಬೇಡ ಎಂದು. ಅದಕೋಸ್ಕರ ಇಲ್ಲಿಗೆ ಬಂದೆ. ತಮ್ಮನ್ನು ಭೇಟಿ ಮಾಡಬಾರದು ಎಂದಲ್ಲ. ಆ ಕ್ಷಮೆ ನಿಮ್ಮಲ್ಲಿ ಇರಲಿ. ಎಲ್ಲರಿಗೂ ಧನ್ಯವಾದ” ಎಂದು ಸುದೀಪ್ ಹೇಳಿದ್ದಾರೆ.

