ಮೈಸೂರು: ಶಾಸಕ ಜನಾರ್ದನ ರೆಡ್ಡಿಯದು ಗೂಂಡಾ ಸಂಸ್ಕೃತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ, ಶಾಸಕ ಜನಾರ್ದನ ರೆಡ್ಡಿಗೆ ಯಾವುದೇ ಸಂಸ್ಕಾರ ಇಲ್ಲ. ಅವರದು ಗೂಂಡಾ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಜನಾರ್ದನ ರೆಡ್ಡಿ. ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಬರದಂತೆ ತಡೆ ಹಿಡಿದಿದ್ದು ಯಾಕೆ? ಸಂತೋಷ್ ಹೆಗಡೆ ಲೋಕಾಯುಕ್ತರಾಗಿದ್ದಾಗ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರದಿ ನೀಡಿದ್ದರು. ಜನಾರ್ದನ ರೆಡ್ಡಿಗೆ ಯಾವುದೇ ಸಂಸ್ಕಾರ ಇಲ್ಲ, ಅವರದು ಗೂಂಡಾ ಸಂಸ್ಕೃತಿ ಎಂದರು.
ಹನುಮಂತಪ್ಪ ಪರವಾಗಿ ಬಳ್ಳಾರಿಗೆ ಚುನಾವಣಾ ಪ್ರಚಾರಕ್ಕೆ ಹೋದಾಗ ನನಗೆ ಮತ್ತು ಸಿಎಂ ಇಬ್ರಾಹಿಂಗೆ ಉಳಿದುಕೊಳ್ಳಲು ಕ್ಯಾಂಪೇನ್ ಮಾಡಲು ಎಲ್ಲಿಯೂ ಜಾಗ ನೀಡಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಾರ್ದನ ರೆಡ್ಡಿಗೆ ಅವರಿಗೆ ನಂಬಿಕೆ ಇಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಗೂಂಡಾಗಿರಿ ಮಾಡುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿಎಂ ಹೇಳಿದ್ದಾರೆ…
ರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ
ಶಾಸಕ ಜನಾರ್ಧನ ರೆಡ್ಡಿ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಶಾಸಕ ಜನಾರ್ಧನ ರೆಡ್ಡಿ ಅವರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದ ಮುಂದೆ ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಗಲಾಟೆ-ಫೈರಿಂಗ್ ಪ್ರಕರಣ ಖಂಡಿಸಿ ನಿನ್ನೆ ಬಳ್ಳಾರಿಯಲ್ಲಿ ಬಿಜೆಪಿ ನಾಯಕರು ಬೃಹತ್ ಸಮಾವೇಶ ನಡೆಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದ ಶಾಸಕ ಜನಾರ್ಧನ ರೆಡ್ಡಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಬಳ್ಳಾರಿ ಕಾಂಗ್ರೆಸ್ ನಾಯಕರು ನನ್ನನ್ನು ಟಾರ್ಗೆಟ್ ಮಾಡಿ ಗುಂಡಿನ ದಾಳಿ ನಡೆಸಿದರೂ ನನಗೆ ರಕ್ಷಣೆ ನೀಡಲು ಆಗಿಲ್ಲ. ನೀನ್ಯಾವ ರೀತಿ ಡಿಸಿಎಂ? ಡಿಸಿಎಂ ಆಗಿ ಏನು ಕಿಸಿದಿದ್ದೀಯಾ? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಜನಾರ್ಧನ ರೆಡ್ಡಿಯ ಪದಬಳಕೆಗೆ ಸಿಡಿದೆದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇಂದು ಜನಾರ್ಧನ ರೆಡ್ಡಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಮನೋಹರ್ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯಲ್ಲಿರುವ ರೆಡ್ಡಿ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

