ನವದೆಹಲಿ : ಇಂದು ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆ ಸಂಭ್ರದದಿಂದ ನಡೆಯಲಿದೆ. ಭಾರತವು ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶವಾದ ನಂತರ, ಪ್ರಧಾನಿ ನರೇಂದ್ರ ಮೋದಿ ಈ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು. ದೇಶದ ಬಾಹ್ಯಾಕಾಶ ಸಾಧನೆಗಳನ್ನು ಪ್ರದರ್ಶಿಸಲು ಕೇಂದ್ರವು ಒಂದು ತಿಂಗಳ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
‘Touching Lives while Touching the Moon: India’s Space Saga’ ಎಂಬ ಘೋಷವಾಕ್ಯದಲ್ಲಿ ಈ ಬಾರಿ ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ. ಇದು ಬಾಹ್ಯಾಕಾಶ ದಿನದ ಸತ್ವವನ್ನು ಸುಂದರವಾಗಿ ವಿವರಿಸಲಿದೆ. ಭಾರತದ ಬಾಹ್ಯಾಕಾಶ ಅನ್ವೇಷಣೆಗಳು ಕೇವಲ ಅಸಾಧಾರಣ ವೈಜ್ಞಾನಿಕ ಸಾಧನೆಗಳಿಗೆ ಸೀಮಿತವಾಗಿರದೆ, ಭಾರತೀಯರ ದೈನಂದಿನ ಜೀವನದ ಮೇಲೂ ಧನಾತ್ಮಕ ಬದಲಾವಣೆ ಬೀರುತ್ತದೆ ಎನ್ನುವುದನ್ನು ಈ ಥೀಮ್ ವಿವರಿಸುತ್ತದೆ.
2023 ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಅಂದಿನಿಂದ ಯೋಜನೆಯ ಯಶಸ್ಸಿಗಾಗಿ ಭಾರತ ಮಾತ್ರವಲ್ಲದೇ ಜಗತ್ತು ಹಾರೈಸಿ ಕಾತುರದಿಂದ ಕಾಯುತ್ತಿತ್ತು. ಭೂಮಿಯಿಂದ ನಭಕ್ಕೆ ಚಿಮ್ಮಿದ 41ನೇ ದಿನದ ನಂತರ ಆಗಸ್ಟ್ 23ರ ಸಂಜೆ ಚಂದ್ರನನ್ನು ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿತು. ಈ ಮೂಲಕ ಭಾರತದ ಹೆಜ್ಜೆ ಗುರುತುಗಳು ಚಂದ್ರನೂರಿನಲ್ಲಿ ಮೂಡಿದವು.
ಅಂತಿಮವಾಗಿ ಕೋಟ್ಯಂತರ ಜನರ ಆಶಯ, ಪ್ರಾರ್ಥನೆ ಫಲಿಸಿತು. ನಿಗದಿತ ಸಮಯದಂತೆ ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಇಳಿಯುವ ಮೂಲಕ ತನ್ನ ಪರಾಕ್ರಮ ಮರೆಯಿತು. ಚಂದ್ರನಿಗೆ ಸನಿಹವಾಗುತ್ತಿದ್ದಂತೆ ಹಾರಿಜಾಂಟರ್ ಮಾದರಿಯಿಂದ ವರ್ಟಿಕಲ್ ಮಾದರಿಗೆ ಲ್ಯಾಂಡರ್ ಬಂದು ಚಂದ್ರನನ್ನು ಚುಂಬಿಸಿತು. ಭಾರತದ ಚಂದ್ರ ಚುಂಬನ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಸಂಭ್ರಮಾಚರಿಸಿದರು.
ಚಂದ್ರನ ಮೇಲೆ ಇಳಿಯುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಈ ಅಪರೂಪದ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಭಾರತಕ್ಕೂ ಮೊದಲು ಅಮೆರಿಕ, ಹಿಂದಿನ ಸೋವಿಯತ್ ಒಕ್ಕೂಟ(ರಷ್ಯಾ) ಮತ್ತು ಚೀನಾದ ಉಪಗ್ರಹಗಳು ಚಂದ್ರನ ಮೇಲೆ ಇಳಿದಿವೆ. ಆದರೆ, ದಕ್ಷಿಣ ಧ್ರುವದಲ್ಲಿ ನೌಕೆಯೊಂದನ್ನು ಇಳಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ದಾಖಲೆಯನ್ನೂ ಭಾರತ ಬರೆದಿದೆ. ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾ ನಂತರ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ಭಾರತವು ನಾಲ್ಕನೇ ದೇಶವಾಗಿದೆ. ಸುಮಾರು 600 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಮಿಷನ್ ಪ್ರಾರಂಭವಾಗಿತ್ತು. .

