ಚಂಡೀಗಢ: ಎರಡನೇ ಬಾರಿಗೆ ಹರಿಯಾಣ ) ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪಂಚಕುಲದಲ್ಲಿ ನಯಾಬ್ ಸೈನಿ ಅವರಿಗೆ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ರಾಜೇಶ್ ನಗರ್ ಮತ್ತು ಗೌರವ್ ಗೌತಮ್ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸೈನಿ ಅವರೊಂದಿಗೆ ಹನ್ನೊಂದು ಸಚಿವರು ಮತ್ತು ಇಬ್ಬರು ರಾಜ್ಯ ಸಚಿವರು (ಎಂಒಎಸ್) ಪ್ರಮಾಣ ವಚನ ಸ್ವೀಕರಿಸಿದರು.
ಅನಿಲ್ ವಿಜ್, ಕ್ರಿಶನ್ ಲಾಲ್ ಪವಾರ್, ರಾವ್ ನರಬೀರ್ ಸಿಂಗ್, ಮಹಿಪಾಲ್ ಧಂಡಾ, ವಿಪುಲ್ ಗೋಯೆಲ್, ಅರವಿಂದ್ ಕುಮಾರ್ ಶರ್ಮಾ, ಶ್ಯಾಮ್ ಸಿಂಗ್ ರಾಣಾ, ರಣಬೀರ್ ಸಿಂಗ್ ಗಂಗ್ವಾ, ಕ್ರಿಶನ್ ಕುಮಾರ್ ಬೇಡಿ, ಶ್ರುತಿ ಚೌಧರಿ ಮತ್ತು ಆರತಿ ಸಿಂಗ್ ರಾವ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್ಡಿಎ ನಾಯಕರು ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ಉಪಸ್ಥಿತರಿದ್ದರು.

