ಪಾವಗಡ: ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಅಮಾನುಷ ಕೃತ್ಯವನ್ನು ಖಂಡಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಲ್ಲಿನ ಪತ್ರಕರ್ತರು ಮಂಗಳವಾರ ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಡಿ.ಎನ್.ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅಪ್ಪಾಜಿಹಳ್ಳಿ ನಾರಾಯಣರೆಡ್ಡಿ ಎನ್ನುವ ವ್ಯಕ್ತಿಯ ಅಕ್ರಮ ಸಂಬಂಧದ ಬಗ್ಗೆ ಡಿ.16 ರಂದು ಸುದ್ದಿ ಪ್ರಕಟಿಸಿದ್ದ ಎನ್ನುವ ಕಾರಣಕ್ಕೆ ಗಡಿನಾಡು ಮಿತ್ರ ಪತ್ರಿಕೆಯ ಸಂಪಾದಕ ಟಿ.ಎ.ರಾಮಾಂಜಿನಪ್ಪ ಅವರ ಮೇಲೆ ನಾರಾಯಣರೆಡ್ಡಿ ಸಮ್ಮುಖದಲ್ಲೇ ಆತನ ಕುಟುಂಬದ ಮೂವರು ಮಹಿಳೆಯರು ಸೋಮವಾರ ಅಮಾನುಷವಾಗಿ ನಡೆದುಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಘಟನೆಯನ್ನು ತೀವ್ರವಾಗಿ ಖಂಡಿಸಿದ ಹಿರಿಯ ಪತ್ರಕರ್ತ ಶಾ.ನಾ.ಪ್ರಸನ್ನಮೂರ್ತಿ,
ಪ್ರತಿಯೊಬ್ಬ ಪತ್ರಕರ್ತರು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಾರೆ. ಎಂತಹ ವರದಿಯಾದರೂ ಘಟನಾ ಸ್ಥಳಕ್ಕೆ ಹೋಗಿ ಜನರಿಗೆ ಮಾಹಿತಿ ನೀಡುತ್ತಾರೆ. ಅಂತಹ ಮಹತ್ವ ಕೆಲಸ ಮಾಡುವ ವರ್ಗಕ್ಕೆ ಹಲ್ಲೆ ಮಾಡುವುದು, ಬೆದರಿಕೆ ಹಾಕುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಎನ್.ಹನುಮಂತರಾಯಪ್ಪ ಮಾತನಾಡಿ, ಪತ್ರಕರ್ತರು ವರದಿಗೆಂದು ಹೋಗುತ್ತಾರೆ. ಅಂತಹವರ ಮೇಲೆ ಏಕಾಏಕಿ ಗೂಂಡಾ ವರ್ತನೆ ಮಾಡುವುದರಿಂದ ಸಮಾಜದ ಕಗ್ಗೊಲೆ ಮಾಡಿದಂತೆ. ರಾಜ್ಯದಲ್ಲಿ ಎಲ್ಲಿಯೂ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೆ.ಆರ್.ಜಯಸಿಂಹ ಮಾತನಾಡಿ, ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎತ್ತಿ ತೋರಿಸಿ, ಅವುಗಳು ಬಗೆಹರಿಯುವಂತೆ ಮಾಡುವುದು ಪತ್ರಕರ್ತರ ಹಕ್ಕು ಮತ್ತು ಕರ್ತವ್ಯವಾಗಿದೆ. ಆದರೆ ತಮ್ಮ ತಪ್ಪನ್ನು ಮರೆಮಾಚಲು ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ತ್ವರಿತವಾಗಿ ತಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಆರೋಪಿಗಳಾದ ನಾರಾಯಣರೆಡ್ಡಿ, ರೂಪ, ಲಕ್ಷ್ಮೀದೇವಿ, ಆದಿಲಕ್ಷ್ಮೀ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ಮೊ.ನಂ:03/2025 ಕಲಂ:117(2).115(2).133.324(4).351(2).353.54 ರೆ/ವಿ 190 ಬಿ.ಎನ್.ಎಸ್-2023 ರಡಿ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿದುಬಂದಿರುತ್ತದೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ನಾಗೇಂದ್ರ.ಹೆಚ್.ಕೆ, ಓ.ರಾಮಾಂಜಿನೇಯಲು, ವಡ್ಡೆ ಶ್ರೀನಿವಾಸಲು, ಸತ್ಯಲೋಕೇಶ್, ಇಮ್ರಾನ್ ಉಲ್ಲಾ, ಹನುಮಂತರಾಯಪ್ಪ, ಹೆಚ್.ರಾಮಾಂಜಿನಪ್ಪ, ನಾಗೇಶ್, ಹೆಚ್.ತಿಮ್ಮರಾಜು, ನರಸಿಂಹಪ್ಪ, ಜೆ.ನಾಗೇಂದ್ರ, ನವೀನ್ ಕಿಲಾರ್ಲಹಳ್ಳಿ, ಚಂದ್ರಪ್ಪ, ಫಾಸ್ಟಿನ್ ಮೈಕಲ್ ಪ್ರದೀಶ್, ಕೆ.ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಹಾಜರಿದ್ದರು.

