Shashi Tharoor : ದೇಶವು ನನ್ನ ಸೇವೆಗೆ ಪರಿಗಣಿಸಿದೆ ಎಂದರೆ ಅದು ಹೆಮ್ಮೆಯ ಸಂಗತಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಅಭಿಪ್ರಾಯಪಟ್ಟರು. ಆ ಮೂಲಕ ತಮ್ಮ ಹೆಸರನ್ನು ಕೈಬಿಟ್ಟ ಸ್ವಪಕ್ಷಕ್ಕೆ ತರೂರ್ ಟಾಂಗ್ ನೀಡಿದರು.
ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ವಿರುದ್ದ ಪ್ರತೀಕಾರ ತೀರಿಸಿಕೊಂಡಿರುವ ಭಾರತ, ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನ ಉಗ್ರ ಮುಖವಾಡ ಬಟಾಬಯಲು ಮಾಡಲು ಪಣ ತೊಟ್ಟಿದ್ದು, ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವನ್ನು ವಿದೇಶಕ್ಕೆ ಕಳುಹಿಸಲು ಕೇಂದ್ರ ನಿರ್ಧರಿಸಿದೆ. ಅವರು ಈ ನಿಯೋಗದ ಭಾಗವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇಶ ಸೇವೆಗೆ ನನ್ನ ಅಗತ್ಯವಿದ್ದಾಗ ನಾನು ಸದಾ ಲಭ್ಯವಿರುತ್ತೇನೆ ಎಂಬುವುದೇ ಗೌರವ ವಿಚಾರ ಎಂದು ಹೇಳಿದರು.
ಪಾಕ್ ಪೋಷಿತ ಉಗ್ರರು ಪಹಲ್ಗಾಮ್ ನಲ್ಲಿ ನಡೆಸಿದ ಭಯೋತ್ಪಾದಕ ದಾಳಿಗೆ ʻಆಪರೇಷನ್ ಸಿಂಧೂರʼದ ಮೂಲಕ ಭಾರತ ಈಗಾಗಲೇ ತಕ್ಕ ಉತ್ತರ ನೀಡಿದೆ. ಇದೀಗ ಭಯೋತ್ಪಾದನೆ, ಉಗ್ರರನ್ನು ಪೋಷಿಸಿ ಕ್ರೂರ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವ ಪಾಕ್ ಕುತಂತ್ರಿ ಬುದ್ಧಿಯನ್ನು ಇಡೀ ವಿಶ್ವದ ಮುಂದೆ ಬಿಚ್ಚಿಡಲು ಭಾರತ ಸಜ್ಜಾಗಿದೆ. ಇದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ಏಳು ಸಂಸದರ ನಿಯೋಗವನ್ನ ರಚಿಸಿದೆ.
ಭಯೋತ್ಪಾದನೆ ವಿರುದ್ಧ ಸರ್ವಪಕ್ಷ ನಿಯೋಗದಲ್ಲಿ ಕಾಂಗ್ರೆಸ್ ಕೊಟ್ಟ ನಾಲ್ವರ ಹೆಸರುಗಳನ್ನು ಬಿಟ್ಟು ಅವರದ್ದೇ ಪಕ್ಷದ ಸಂಸದ ಶಶಿ ತರೂರ್ ಅವರನ್ನು ಕೇಂದ್ರ ಸರ್ಕಾರ ಆಯ್ಕೆಮಾಡಿದೆ. ಈ ಸಂಗತಿ ಇದೀಗ ಕೇಂದ್ರ ಹಾಗೂ ಕಾಂಗ್ರೆಸ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಆಪರೇಷನ್ ಸಿಂಧೂರದ ಬಳಿಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದರು. ಇದರಿಂದ ಲಕ್ಷ್ಮಣ ರೇಖೆ ಮೀರಿದ್ದಾರೆ ಎಂದು ಕಾಂಗ್ರೆಸ್ನಿಂದಲೇ ಅವರು ಟೀಕೆಗೆ ಒಳಗಾಗಿದ್ದು ಗೊತ್ತೇ ಇದೆ.

