ನಂಜನಗೂಡು: “ಹತ್ತೂರು ಸುತ್ತಿ ನೋಡು, ಸುತ್ತೂರು ಜಾತ್ರೆ ನೋಡು” ಎಂಬ ನಾಣ್ಣುಡಿಯಂತೆ ವಿಶ್ವವಿಖ್ಯಾತ ಸುತ್ತೂರು ಜಾತ್ರಾ ಮಹೋತ್ಸವದ ಕೇಂದ್ರಬಿಂದುವಾಗಿರುವ ಮಹಾ ದಾಸೋಹಕ್ಕೆ ಬುಧವಾರ ಮುಂಜಾನೆ ಸುತ್ತೂರು ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬೃಹತ್ ಒಲೆಗಳಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಹಳೆ ಮೈಸೂರು ಭಾಗದಲ್ಲಿ ದೀರ್ಘಕಾಲ ನಡೆಯುವ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆ 7 ಗಂಟೆಗೆ ಶಿವಯೋಗಿ ಶಿವರಾತ್ರಿಶ್ವರ ಕೇಂದ್ರ ಮಹಾಸ್ವಾಮಿಗಳ ಕತೃಗದ್ದಿಗೆಯಲ್ಲಿ ವಿವಿಧ ಪೂಜಾ ವಿಧಾನಗಳು ನೆರವೇರಿಸಲಾಯಿತು. ನಂತರ ಸುಮಾರು 7 ಗಂಟೆ ಸುಮಾರಿಗೆ 36 ಬೃಹತ್ ಒಲೆಗಳಿಗೆ ಸಾಧು–ಶರಣರು, ಗ್ರಾಮಸ್ಥರು ಹಾಗೂ ಗಣ್ಯರು ಕರ್ಪೂರದಿಂದ ಅಗ್ನಿ ಸ್ಪರ್ಶ ಮಾಡುವ ಮೂಲಕ ಮಹಾ ದಾಸೋಹಕ್ಕೆ ಚಾಲನೆ ನೀಡಿದರು.
ಆರು ದಿನಗಳ ಕಾಲ ನಡೆಯುವ ಮಹಾ ದಾಸೋಹದಲ್ಲಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ವೇಳೆ ನಿರಂತರವಾಗಿ ದಾಸೋಹ ನಡೆಯಲಿದೆ. ಈ ದಾಸೋಹದಲ್ಲಿ 35 ಬೃಹತ್ ಕೊಪ್ಪರಿಕೆಗಳು, ಸುಮಾರು 500 ಬಾಣಸಿಗರು, 500ಕ್ಕೂ ಹೆಚ್ಚು ಸಹಾಯಕರು ಹಾಗೂ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಗ್ರಾಮಸ್ಥರು ಸೇವೆ ಸಲ್ಲಿಸಲಿದ್ದಾರೆ.
ಗದ್ದುಗೆ ಪಕ್ಕದ ವಿಶಾಲ ಮೈದಾನದಲ್ಲಿ ಮಹಿಳೆಯರು, ಪುರುಷರು, ಸ್ವಯಂಸೇವಕರು ಹಾಗೂ ಸಾಮಾನ್ಯ ಭಕ್ತರಿಗಾಗಿ ಬೃಹತ್ ಶಾಮಿಯಾನಗಳನ್ನು ಹಾಕಲಾಗಿದೆ. ಒಂದು ವೇಳೆ ಸುಮಾರು ಒಂದು ಲಕ್ಷ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನಸಾಂಬಾರ್, ಮಜ್ಜಿಗೆ, ಕಡ್ಲೆಹುಳಿ, ಮೈಸೂರು ಪಾಕ್, ಪಾಯಸ ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರಿಗೆ ಬಡಿಸಲಾಗುತ್ತದೆ.
ಮಹಾ ದಾಸೋಹಕ್ಕೆ 1000 ಕ್ವಿಂಟಲ್ ಅಕ್ಕಿ, 250 ಕ್ವಿಂಟಲ್ ತೊಗರಿ ಬೇಳೆ, 1600 ಕ್ಯಾನ್ ರಿಫೈಂಡ್ ಆಯಿಲ್, 14 ಟನ್ ಬೆಲ್ಲ, 1350 ಕೆ.ಜಿ ಖಾರದ ಪುಡಿ, 200 ಕ್ವಿಂಟಲ್ ಸಕ್ಕರೆ, 600 ಕೆ.ಜಿ ನಂದಿನಿ ತುಪ್ಪ, 1400 ಕೆ.ಜಿ ದ್ರಾಕ್ಷಿ–ಗೋಡಂಬಿ, 9000 ಲೀಟರ್ ಹಾಲು, 28,000 ಲೀಟರ್ ಮೊಸರು, 5000 ಕೆ.ಜಿ ಉಪ್ಪಿನ ಕಾಯಿ, ತರಕಾರಿಗಳು, 25,000 ತೆಂಗಿನಕಾಯಿ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಬಳಸಲಾಗುತ್ತಿದೆ.
ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 2 ಎಎಸ್ಪಿ, 4 ಡಿವೈಎಸ್ಪಿ, 12 ಪೊಲೀಸ್ ಇನ್ಸ್ಪೆಕ್ಟರ್ಗಳು, 35 ಪಿಎಸ್ಐಗಳು ಸೇರಿದಂತೆ ಸ್ವಯಂಸೇವಕರು ಹಾಗೂ ಎನ್ಸಿಸಿ ವಿದ್ಯಾರ್ಥಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಇಮ್ಮಡಿ ಮುರಗಿ ಸ್ವಾಮಿಗಳು, ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ನಂಜನಗೂಡು ಮಲ್ಲಿನಾಥ ಸ್ವಾಮಿಗಳು, ಕುರುಬೂರು ಮಲ್ಲಿಕಾರ್ಜುನ ಸ್ವಾಮಿಗಳು, ಮಾದಾಪುರ ಚನ್ನಬಸವ ಸ್ವಾಮಿಗಳು, ಚುಂಚನಹಳ್ಳಿ ಷಡಕ್ಷರಿ ಸ್ವಾಮಿಗಳು, ಗವಿಮಠ ಪ್ರಭುಲಿಂಗ ಸ್ವಾಮಿಗಳು, ರಾಗಿಬೊಮ್ಮನಹಳ್ಳಿ ಮಠದ ಬಸವಲಿಂಗ ದೇಸಿ ಕೇಂದ್ರ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು, ಎಸ್ಪಿ ಉದಯ್ ಶಂಕರ್, ಎಸ್ಪಿ ಮಂಜುನಾಥ, ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

