ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ (Charmadi Ghat) ಬಳಿಯ ನಿಷೇಧಿತ ಫಾಲ್ಸ್ ಒಂದರ ಬಳಿ ಪ್ರವಾಸಕ್ಕೆ ಬಂದಿದ್ದ ಯುವಕರು ಹುಚ್ಚಾಟ ಮಾಡಿದ್ದು, ಬಣಕಲ್ ಪೊಲೀಸರು (Banakal Police) ಯುವಕರ ಬಟ್ಟೆ ಹೊತ್ತೊಯ್ದು ಬುದ್ಧಿ ಕಲಿಸಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲ ಜಲಪಾತಗಳು ತುಂಬಿ ಹರಿಯುತ್ತಿವೆ. ಚಾರ್ಮಾಡಿ ಘಾಟ್ ಬಳಿಯ ನಿಷೇಧಿತ ಜಲಪಾತದ ಬಳಿ ಇರುವ ಸೂಚನಾ ಫಲಕಗಳನ್ನೂ ಲೆಕ್ಕಿಸದೇ ಯುವಕರು ಅಪಾಯಕಾರಿ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆಗೆ SCSP-TSP ಹಣ ಬಳಕೆ
ಇದೇ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಯುವಕರು ಕಿವಿ ಕೊಡದ ಕಾರಣ ಬಟ್ಟೆಯನ್ನು ಕೊಂಡೊಯ್ದು ಗಸ್ತು ವಾಹನದಲ್ಲಿ ತುಂಬಿದ್ದಾರೆ. ಈ ವೇಳೆ ಯುವಕರು ಬರಿ ಚಡ್ಡಿಯಲ್ಲೇ ಬಟ್ಟೆ ಕೊಡಿ ಎಂದು ಪೊಲೀಸರ ಹಿಂದೆ ಓಡಿದ್ದಾರೆ. ಇದನ್ನೂ ಓದಿ: 12 ವರ್ಷದ ಬಾಲಕನ ಭೀಕರ ಹತ್ಯೆ- ಕೊಲೆಗೈದು ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ದುಷ್ಕರ್ಮಿಗಳು
ಇದರಿಂದ ಪೇಚೆಗೆ ಸಿಲುಕಿದ ಯುವಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಬಳಿಕ ಯುವಕರು ಇನ್ನೂ ಹೀಗೆ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಬಳಿಕ ಪೊಲೀಸರು ಬಟ್ಟೆ ಕೊಟ್ಟು ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಮಗನ ಜೊತೆ ಬಂದ ವಿಜಯಲಕ್ಷ್ಮಿ

