ಚಿಕ್ಕಮಗಳೂರು, ಡಿಸೆಂಬರ್ 12: ಪ್ರೇಮ ಸಂಬಂಧಕ್ಕೆ ಕೈಕೊಟ್ಟು ಬೇರೆ ಯುವತಿಯೊಂದಿಗೆ ಯುವಕ ಮದುವೆಯಾದ ಹಿನ್ನೆಲೆಯಲ್ಲಿ ನೊಂದ ಯುವತಿ ಮದುವೆ ಮಂಟಪದಲ್ಲೇ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ, ಕಳೆದ 10 ವರ್ಷಗಳಿಂದ ಶರತ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದು, ಮದುವೆಯಾಗುವುದಾಗಿ ನಂಬಿಸಿ ಆತ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಸಂಬಂಧ 8 ತಿಂಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ನಿನ್ನೆ ಶರತ್ ಮನೆಯ ಮುಂದೆ ಏಕಾಂಗಿ ಹೋರಾಟ ನಡೆಸಿದ್ದ ಯುವತಿ, ಅದರ ಮುಂದುವರಿದ ಭಾಗವಾಗಿ ಇಂದು ಮದುವೆ ಮಂಟಪಕ್ಕೆ ಆಗಮಿಸಿ ಗದ್ದಲ ಸೃಷ್ಟಿಸಿದ್ದಾಳೆ.
ಮದುವೆ ಮಂಟಪದಲ್ಲೇ ತನ್ನನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವತಿ, ಮಂಟಪದೊಳಗೆ ಧರಣಿ ಕುಳಿತು ಆಕ್ರೋಶ ಹೊರಹಾಕಿದ್ದಾಳೆ. “ನಾನು ಬರುವ ಮೊದಲೇ ಮದುವೆ ಮುಗಿಸಿಕೊಂಡಿದ್ದಾರೆ. ನನ್ನನ್ನು ಇಲ್ಲಿಂದ ಹೋಗುವಂತೆ ಹೇಳಿ ಹಣ ನೀಡಲು ಯತ್ನಿಸಿದ್ದಾರೆ. ನನಗೆ ಹಣ ಬೇಡ, ಆತ ನನ್ನನ್ನೇ ಮದುವೆಯಾಗಬೇಕು” ಎಂದು ಆಕೆ ತಿಳಿಸಿದ್ದಾಳೆ. ಜೊತೆಗೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವನ್ನೂ ಮಾಡಿದ್ದಾಳೆ.
ಆದರೆ, ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಿಗದಿತ ಮುಹೂರ್ತದಂತೆ ವಿವಾಹ ಕಾರ್ಯ ಪೂರ್ಣಗೊಂಡಿದೆ. ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

