ಮುಂಬಯಿ: ಪಿಂಪ್ರಿ ಚಿಂಚ್ವಾಡದ ನಾಲ್ವರು ಹಿರಿಯ ನಾಯಕರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಅಜಿತ್ ಪವಾರ್ ಅವರ ಎನ್ಸಿಪಿ ಬಣಕ್ಕೆ ಆಘಾತ ಎದುರಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನಾ (ಶಿಂಧೆ ಬಣ) ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಒಳಗೊಂಡ ಮಹಾಯುತಿ ಮೈತ್ರಿಕೂಟವು ಭಾರಿ ಹಿನ್ನಡೆ ಅನುಭವಿಸಿತ್ತು. ಈಗ ತಪ್ಪುಗಳನ್ನು ತಿದ್ದಿಕೊಂಡು ಒಗ್ಗಟ್ಟಿನಿಂದ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿಯುವ ಪ್ರಯತ್ನದಲ್ಲಿರುವ ಎನ್ಡಿಎಗೆ, ಅಜಿತ್ ಪವಾರ್ ಬೆಂಬಲಿಗರ ರಾಜೀನಾಮೆ ಮತ್ತಷ್ಟು ಹಿನ್ನಡೆ ಉಂಟುಮಾಡಿದೆ.
ಎನ್ಸಿಪಿಯ ಭದ್ರ ಕೋಟೆ ಎಂದೇ ಪರಿಗಣಿಸಲಾಗಿದ್ದ ಪಿಂಪ್ರಿ- ಚಿಂಚ್ವಾಡದ ಘಟಕದ ಮುಖ್ಯಸ್ಥ ಅಜಿತ್ ಗವ್ಹಾನೆ ಅವರು ಅಜಿತ್ ಪವಾರ್ಗೆ ರಾಜೀನಾಮೆ ಸಲ್ಲಿಸಿದ ಪ್ರಮುಖರಲ್ಲಿ ಸೇರಿದ್ದಾರೆ.
ಅವರ ಜತೆಗೆ ಪಿಂಪ್ರಿ ಚಿಂಜ್ವಾಡ ವಿದ್ಯಾರ್ಥಿ ಘಟಕದ ಮುಖ್ಯಸ್ಥ ಯಶ್ ಸಾನೆ, ಮಾಜಿ ಕಾರ್ಪೊರೇಟರ್ಗಳಾದ ರಾಹುಲ್ ಭೋಸಲೆ ಮತ್ತು ಪಂಕಜ್ ಭಾಲೇಕರ್, ರಾಜೀನಾಮೆ ನೀಡಿದ ಉಳಿದ ಮೂವರು ನಾಯಕರು. ಅಜಿತ್ ಪವಾರ್ ಬಣದಲ್ಲಿರುವ ಕೆಲವು ನಾಯಕರು ಶರದ್ ಪವಾರ್ ಅವರ ಪಕ್ಷಕ್ಕೆ ಮರಳಲು ಬಯಸುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.ಪಕ್ಷವನ್ನು ತೊರೆದಿರುವವರು ತಮ್ಮ ಮಾಜಿ ನಾಯಕ ಶರದ್ ಪವಾರ್ ಅವರ ನೇತೃತ್ವದ ಪಕ್ಷವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.

