ನವದೆಹಲಿ: ಭಯೋತ್ಪಾದನೆ, ಭಯೋತ್ಪಾದಕರು ಮತ್ತು ಭಯೋತ್ಪಾದಕ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಎಲ್ಲಾ ರಾಜ್ಯಗಳು ಮುನ್ನಡೆಸಬೇಕಾಗಿರುವುದರಿಂದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರವು ಶೀಘ್ರದಲ್ಲೇ ಅನಾವರಣವಾಗಲಿದೆ ಎಂದು ದೆಹಲಿಯಲ್ಲಿ ಆಯೋಜಿಸಲಾದ ‘ಭಯೋತ್ಪಾದನಾ ವಿರೋಧಿ ಸಮಾವೇಶ-2024’ದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಯೋತ್ಪಾದನೆಯ ನಿಗ್ರಹಕ್ಕೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಮತ್ತು ಕಾರ್ಯತಂತ್ರವನ್ನು ಬಿಡುಗಡೆ ಮಾಡಲಿದೆ. ಅದು ಇಡೀ ಭಯೋತ್ಪಾದನಾ ವ್ಯವಸ್ಥೆಯನ್ನು ನಾಶಮಾಡಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ಎಂಬ ಘೋಷಣೆಯನ್ನು ಅಮಿತ್ ಶಾ ಪುನರುಚ್ಚರಿಸಿದ್ದಾರೆ.
‘ಭಯೋತ್ಪಾದನಾ ವಿರೋಧಿ ಸಮಾವೇಶ-2024’ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅಮಿತ್ ಶಾ, ಭಯೋತ್ಪಾದಕ ದಾಳಿಗಳು ಮತ್ತು ಅವರ ಪಿತೂರಿಗಳನ್ನು ಎದುರಿಸಬೇಕಾದರೆ, ನಮ್ಮ ಯುವ ಅಧಿಕಾರಿಗಳು ಅತ್ಯುನ್ನತ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು, ಮುಂದಿನ ದಿನಗಳಲ್ಲಿ ನಾವು ಅದನ್ನು ತರಬೇತಿಯ ಪ್ರಮುಖ ಭಾಗವಾಗಿ ಮಾಡುತ್ತೇವೆ ಎಂದಿದ್ದಾರೆ.
ಗಡಿ ರಹಿತ ಮತ್ತು ಅದೃಶ್ಯ ಭಯೋತ್ಪಾದಕ ಬೆದರಿಕೆಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಭಯೋತ್ಪಾದನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಈಗ ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಇದುವರೆಗೆ 36,468 ಪೊಲೀಸ್ ಸಿಬ್ಬಂದಿ ಆಂತರಿಕ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಭಾರತ ಸರ್ಕಾರವು ದೃಢವಾದ ಕಾರ್ಯತಂತ್ರವನ್ನು ಅನುಸರಿಸಿದೆ. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ಎಂಬ ಮೋದಿಯವರ ಘೋಷಣೆಯನ್ನು ಭಾರತ ಮಾತ್ರವಲ್ಲದೆ ಇಡೀ ವಿಶ್ವವು ಭಯೋತ್ಪಾದನೆಯ ವಿರುದ್ಧ ಹೋರಾಡಲು ಪ್ರಬಲವಾದ ವ್ಯವಸ್ಥೆಯನ್ನು ರಚಿಸಿದೆ ಎಂದು ಅವರು ಹೇಳಿದ್ದಾರೆ.

