Renukaswamy Murder Case : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿದ ಕೋರ್ಟ್, ಪ್ರಕರಣದ ಗಂಭೀರತೆ ಮತ್ತು ಸಾಕ್ಷ್ಯಗಳ ಬಲವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ತೆಗೆದುಕೊಂಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.
ಕಳೆದ ಡಿಸೆಂಬರ್ (2024)ರಲ್ಲಿ ಕರ್ನಾಟಕ ಹೈಕೋರ್ಟ್, ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಪ್ರಕರಣದ ಸೂಕ್ಷ್ಮತೆ ಮತ್ತು ಸಾಕ್ಷ್ಯಗಳನ್ನು ಪರಿಗಣಿಸಿದ ಸರ್ಕಾರಿ ವಕೀಲರು, ಸುಪ್ರೀಂ ಕೋರ್ಟ್ ಗೆ ಜಾಮೀನು ಆದೇಶವನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಪುನಃ ವಿಚಾರಣೆ ನಡೆಸಿ, ಹೈಕೋರ್ಟ್ ತೀರ್ಪಿನಲ್ಲಿ ತಾಂತ್ರಿಕ ದೋಷಗಳಿದ್ದು, ಪ್ರಕರಣದ ತೀವ್ರತೆಗೆ ಅನುಗುಣವಾಗಿ ನ್ಯಾಯ ನೀಡಬೇಕಿತ್ತು ಎಂದು ಟೀಕಿಸಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ಜೆ.ಬಿ. ಪರ್ದಿವಾಲಾ ಮತ್ತು ಜಸ್ಟಿಸ್ ಆರ್. ಮಹಾದೇವನ್ ಅವರ ಪೀಠವು, ದರ್ಶನ್ ಮತ್ತು ಇತರ ಆರೋಪಿಗಳ ವಕೀಲರ ವಾದಗಳನ್ನು ಸ್ಥಗಿತಗೊಳಿಸಿತು. ಸರ್ಕಾರಿ ವಕೀಲರು, ದರ್ಶನ್ ರೇಣುಕಾ ಸ್ವಾಮಿಯವರ ಮೇಲೆ ನಡೆದ ಹಲ್ಲೆಯ ಸಮಯದಲ್ಲಿ ಅಲ್ಲಿದ್ದುದು, ಹಲ್ಲೆಯ ವೀಡಿಯೊ ರೆಕಾರ್ಡ್ ಮಾಡಿದ ಸಾಕ್ಷ್ಯ ಮತ್ತು ಬಟ್ಟೆಗಳ ಮೇಲೆ ಕಂಡುಬಂದ ರಕ್ತದ ಕಲೆಗಳನ್ನು ಪ್ರಬಲ ಸಾಕ್ಷ್ಯಗಳಾಗಿ ಮಂಡಿಸಿದ್ದರು. ಇವುಗಳ ಆಧಾರದ ಮೇಲೆ, ಆರೋಪಿಗಳು ಸಮಾಜಕ್ಕೆ ಅಪಾಯಕಾರಿ ಎಂದು ನ್ಯಾಯಾಲಯ ಭಾವಿಸಿದೆ.
ಆರೋಪಿಗಳ ಜಾಮೀನು ಅರ್ಜಿಗಳನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್, ದರ್ಶನ್ ಮತ್ತು ಇತರ ಆರೋಪಿಗಳು ತಕ್ಷಣ ಜೈಲಿಗೆ ಮರಳಬೇಕೆಂದು ಆದೇಶಿಸಿದೆ. ಈ ತೀರ್ಪಿನ ನಂತರ, ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸಲಿದ್ದಾರೆ. ಕೊಲೆ ಪ್ರಕರಣದ ತನಿಖೆ ಮತ್ತು ನ್ಯಾಯ ವಿಚಾರಣೆಗೆ ಈ ನಿರ್ಣಯವು ಗಮನಾರ್ಹ ತಿರುವು ನೀಡಿದೆ.
VIP ಟ್ರೀಟ್ಮೆಂಟ್ ಕೊಟ್ರೆ ಹುಷಾರ್ : ಸುಪ್ರೀಂ ಎಚ್ಚರಿಕೆ
ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ರ ದ್ದುಗೊಳಿಸಿದೆ. ಈ ಹಿನ್ನೆಲೆ ದರ್ಶನ್ಗೆ ಜೈಲಿನಲ್ಲಿ ವಿಐಪಿ ಟ್ರೀಟ್ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ ಕೊಟ್ಟಿದೆ.
ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ಮೆಂಟ್ ನೀಡಲಾಗುತ್ತಿದೆ ಎಂದು ನಮಗೆ ತಿಳಿದ ದಿನ, ಮೊದಲ ಹೆಜ್ಜೆಯೇ ಸೂಪರಿಂಟೆಂಡೆಂಟ್ ಮತ್ತು ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು. ರಾಜ್ಯ ಸರ್ಕಾರ ಯಾರಿಗಾದರೂ ವಿಐಪಿ ಟ್ರೀಟ್ಮೆಂಟ್ ನೀಡುತ್ತಿರುವ ಛಾಯಾಚಿತ್ರಗಳು ಅಥವಾ ಯಾವುದೇ ವೀಡಿಯೊವನ್ನು ನಾವು ನೋಡಿದರೆ ಮೊದಲು ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಆದೇಶಿಸಿದ್ದು, ಕೂಡಲೇ ಎಲ್ಲಾ ಆರೋಪಿಗಳು ಶರಣಾಗಬೇಕು ಎಂದು ಸೂಚಿಸಿದೆ. ಶರಣಾಗದಿದ್ದರೇ ಕೂಡಲೇ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈ ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್ಗಳು ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ.

