ರಾಯಚೂರು: ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ವಿಷಪೂರಿತ ನೀರು ಸೇವಿಸಿದ ಶಂಕೆಯಿಂದ 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ. ಈ ಘಟನೆಯಿಂದ ಕುರಿಗಾಹಿಗಳು ಭಾರೀ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮಲ್ಲಿನಾಯಕನದೊಡ್ಡಿ ಗ್ರಾಮದ ಕುರಿಗಾಹಿ ಭೀಮಯ್ಯ ನಾಯಕ (ತಂದೆ ಹನುಮಂತ್ರಾಯ ನಾಯಕ) ಅವರಿಗೆ ಸೇರಿದ 35 ಕುರಿಗಳು ಹಾಗೂ ಕೊತ್ತದೊಡ್ಡಿ ಗ್ರಾಮದ ಕುರಿಗಾಹಿ ಲಕ್ಷ್ಮಣ (ತಂದೆ ಸಾಹೇಬಗೌಡ) ಅವರಿಗೆ ಸೇರಿದ 5 ಕುರಿಗಳು ಸಾವಿಗೀಡಾಗಿವೆ. ಇನ್ನೂ ನಾಲ್ಕಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿರುವುದಾಗಿ ತಿಳಿದುಬಂದಿದೆ.
ಹೆಗ್ಗಡದಿನ್ನಿ ಗ್ರಾಮದಲ್ಲಿನ ಹಳ್ಳದ ನೀರನ್ನು ಕುಡಿದ ಬಳಿಕ ಕುರಿಗಳು ಅಸ್ವಸ್ಥಗೊಂಡು ಕ್ರಮೇಣ ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಗ್ಗಿ ಕಾಲ ಮುಗಿದ ಹಿನ್ನೆಲೆಯಲ್ಲಿ ಊರಿಂದ ಊರಿಗೆ ಕುರಿಗಳನ್ನು ಮೇಯಿಸಲು ತೆರಳಿದ್ದ ಕುರಿಗಾಹಿಗಳಿಗೆ ಈ ದುರ್ಘಟನೆ ಭಾರೀ ನಷ್ಟವನ್ನುಂಟುಮಾಡಿದೆ. ಸಾಲ-ಶೂಲ ಮಾಡಿಕೊಂಡು ಕುರಿ ಸಾಕಾಣಿಕೆ ನಡೆಸುತ್ತಿದ್ದ ಕುಟುಂಬಗಳಿಗೆ ಈ ಘಟನೆ ಬರಸಿಡಿಲಿನಂತೆ ಬಡಿದಿದೆ.
ಪರಿಹಾರಕ್ಕೆ ಆಗ್ರಹ
ವಿಷಪೂರಿತ ನೀರು ಸೇವನೆಯಿಂದಲೇ ಕುರಿಗಳ ಸಾವು ಸಂಭವಿಸಿದೆ ಎಂಬ ಶಂಕೆಯಿದ್ದು, ಸರ್ಕಾರ ತಕ್ಷಣ ಪರಿಹಾರ ನೀಡಬೇಕೆಂದು ಕುರಿಗಾಹಿಗಳು ಆಗ್ರಹಿಸಿದ್ದಾರೆ.
ಶಾಸಕಿಯ ಭೇಟಿ, ಪರಿಶೀಲನೆ
ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ ಅವರು ಕಂದಾಯ ಇಲಾಖೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತ ಕುರಿಗಳ ಅಂತ್ಯಕ್ರಿಯೆ ಪ್ರಕ್ರಿಯೆ ಕೈಗೊಳ್ಳಲಾಯಿತು. ಕುರಿಗಳು ಸೇವಿಸಿದ ಹಳ್ಳದ ನೀರನ್ನು ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದಾರೆ.
ಕುರಿಗಾಹಿಗಳ ನೋವು
“ನಮ್ಮ ಕುಟುಂಬದ ಜೀವನೋಪಾಯ ಕುರಿಗಳ ಮೇಲೆಯೇ ಅವಲಂಬಿತವಾಗಿತ್ತು. ಕುರಿಗಳ ಸಾವಿನಿಂದ ನಮ್ಮ ಮೇಲೆ ಬರಸಿಡಿಲು ಬಡಿದಂತಾಗಿದೆ. ಆರ್ಥಿಕವಾಗಿ ಭಾರೀ ನಷ್ಟ ಅನುಭವಿಸಿದ್ದೇವೆ. ಸರ್ಕಾರ ತಕ್ಷಣ ಪರಿಹಾರ ನೀಡಬೇಕು,”
– ಭೀಮಯ್ಯ ನಾಯಕ, ಸಾಹೇಬಗೌಡ (ಕುರಿಗಾಹಿಗಳು)
ಅರಕೇರಾ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿನ ಘಟನಾ ಸ್ಥಳಕ್ಕೆ ಶಾಸಕಿ ಕರೆಮ್ಮ ಜಿ. ನಾಯಕ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದರು. ಈ ವೇಳೆ ಕಂದಾಯ ನಿರೀಕ್ಷಕ ಅನಿಲ್ ಕುಮಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ರಿಯಾಜ್
ಸಂಪೂರ್ಣ ನ್ಯೂಸ್, ರಾಯಚೂರು

